ಹಟ್ಟಿ: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯಲ್ಲ, ಕೊಲೆ ಮಾಡಿ ನೇಣು ಹಾಕಿರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಶಂಕಿಸಿರುವ ಘಟನೆ ಹಟ್ಟಿ ಪಟ್ಟಣದ ಮಾಚನೂರು ತಾಂಡಾ ಸಮೀಪದ ಗುಡ್ಡದಲ್ಲಿ ನಡೆದಿದೆ.
ಲಿಂಗಸುಗೂರು ತಾಲೂಕಿನ ಪರಾಂಪೂರ ತಾಂಡಾದ ಸುರೇಶ (28) ಮೃತ ಯುವಕ. ಸುರೇಶ ಹಾಗೂ ಆತನ ತಾಯಿ ತಾರಾಬಾಯಿ ಇಬ್ಬರೂ ಬೆಂಗಳೂರಿಗೆ ದುಡಿಯಲು ತೆರಳಿದ್ದರು. ತನ್ನ ಪತ್ನಿ ಹಾಗೂ ಅಪ್ರಾಪ್ತ ಮೂರು ಮಕ್ಕಳನ್ನು ಕರೆತರಲು ಸುರೇಶ ಮಾಚನೂರು ತಾಂಡಾಕ್ಕೆ ಬಂದಿದ್ದ ಎನ್ನಲಾಗಿದೆ.
ಈ ವೇಳೆ ಪತ್ನಿ, ಅಳಿಯಂದಿರು, ಅತ್ತೆ ಹಾಗೂ ಮಾವ ಸೇರಿದಂತೆ ಕೆಲವರು ತನ್ನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸುರೇಶ ತನ್ನ ತಾಯಿಗೆ ಫೋನ್ ಮೂಲಕ ತಿಳಿಸಿದ್ದ ಎನ್ನಲಾಗಿದೆ. ಬಳಿಕ ಮರುದಿನ ಮಾಚನೂರು ತಾಂಡಾ ಸಮೀಪದ ಗುಡ್ಡದಲ್ಲಿ ಗಿಡಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಸುರೇಶನ ಶವ ಪತ್ತೆಯಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಸುರೇಶನ ತಾಯಿ ತಾರಾಬಾಯಿ, ತನ್ನ ಮಗನನ್ನು ಕೊಲೆ ಮಾಡಿ ಗಿಡಕ್ಕೆ ನೇಣು ಹಾಕಲಾಗಿದೆ ಎಂದು ಶಂಕಿಸಿ ಹಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿ, ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
ದೂರು ದಾಖಲಿಸಿಕೊಂಡಿರುವ ಹಟ್ಟಿ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದು, ಯುವಕನ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ಬಳಿಕ ಸಾವಿನ ನಿಜವಾದ ಕಾರಣ ಬಹಿರಂಗವಾಗುವ ನಿರೀಕ್ಷೆಯಿದೆ.