ಸಿಂಧನೂರು : ತಾನು ಸಾಕಿದ ಎತ್ತುಗಳೇ ಪ್ರಾಣ ತೆಗೆದ ವಿಚಿತ್ರ ಹಾಗೂ ದಾರುಣ ಘಟನೆ ತಾಲ್ಲೂಕಿನ ಬೆಳಗುರ್ಕಿ ಗ್ರಾಮದಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಗ್ರಾಮದ ರೈತ ಯಮನಪ್ಪ (60) ಮೃತ ದುರ್ದೈವಿ.
ಇಂದು ಮುಂಜಾನೆ ಜಮೀನಿನಲ್ಲಿ ಉಳುಮೆ ಮುಗಿಸಿ ಎತ್ತುಗಳಿಗೆ ಕಟ್ಟಿದ್ದ ಹಗ್ಗ ಬಿಚ್ಚುವಾಗ, ಆಕಸ್ಮಿಕವಾಗಿ ಹಗ್ಗವು ರೈತನ ಕೈಗೆ ಸಿಲುಕಿಕೊಂಡಿದೆ. ತಕ್ಷಣ ಬೆಚ್ಚಿಬಿದ್ದ ಎತ್ತುಗಳು ರೈತನನ್ನು ಸುಮಾರು 2 ಕಿ.ಮೀ ದೂರದವರೆಗೆ ಗ್ರಾಮದ ಬನ್ನಿ ಮಹಾಕಾಳಮ್ಮ ಗುಡಿಯವರೆಗೆ ಎಳೆದುಕೊಂಡು ಹೋಗಿವೆ. ಗಂಭೀರವಾಗಿ ಗಾಯಗೊಂಡಿದ್ದ ರೈತನನ್ನು ಸ್ಥಳೀಯರು ಕೂಡಲೆ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರ ಮಗ ಬಸವರಾಜ ನೀಡಿದ ದೂರಿನ ಮೇರೆಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಮರಣೋತ್ತರ ಪರೀಕ್ಷೆಗೆ ವೈದ್ಯರು ಸಮಯಕ್ಕೆ ಸರಿಯಾಗಿ ಬಾರದಿರುವುದು ಹಾಗೂ ಆಸ್ಪತ್ರೆಯ ಆಡಳಿತಾಧಿಕಾರಿಗಳು ಕರೆ ಸ್ವೀಕರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಕೃಷಿ ಸಮಾಜದ ಅಧ್ಯಕ್ಷ ಹೊನ್ನನಗೌಡ ಬೆಳಗುರ್ಕಿ ಹಾಗೂ ಮುಖಂಡರು ವೈದ್ಯರ ಬೇಜವಾಬ್ದಾರಿ ನಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.