ರಾಯಚೂರು : ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಅರುಣ ಮಿಶ್ರಾರವರ ನೇತೃತ್ವದ ಸಂವಿಧಾನ ಪೀಠವು ರಾಜ್ಯಗಳಿಗೆ ಪರಿಶಿಷ್ಟ ಜಾತಿಯವರಲ್ಲಿ ಮೀಸಲಾತಿಯ ವರ್ಗೀಕರಣವನ್ನು ಮಾಡಬಹುದು ಎಂದು ಮಾಡಿರುವ ಆದೇಶವನ್ನು ರದ್ದು ಮಾಡಬೇಕೆಂದು ರಿಟ್ ಅರ್ಜಿ ಸಲ್ಲಿಸಲಾಗುವುದೆಂದು ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ರಾಜ್ಯಾಧ್ಯಕ್ಷ ಮಹೇಂದ್ರಕುಮಾರ ಮಿತ್ರ ಹೇಳಿದರು.
ನ್ಯಾಯಮೂರ್ತಿ ಅರುಣ್ ಮಿಶ್ರಾ ರವರ ನೇತೃತ್ವದ ಸಂವಿಧಾನ ಪೀಠದ ಆದೇಶದ ಪ್ರಕಾರ, ಸಂವಿಧಾನ ಅನುಚ್ಛೇದ(16(4)ರ ಪ್ರಕಾರ ಹಿಂದುಳಿದ ವರ್ಗಗಳ ವ್ಯಾಪ್ತಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳು ಬರುತ್ತವೆ. ರಾಜ್ಯ ಸರ್ಕಾರವು ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವ ಅಧಿಕಾರ ಹೊಂದಿದೆ. ಮತ್ತು ಮೀಸಲಾತಿಯನ್ನು ಸರಿ ಸಮಾನವಾಗಿ ಹಂಚಿಕೆ ಮಾಡಬಹುದು ಈ ಕಾರಣದಿಂದ ನಾವು ಈ.ವಿ.ಚಿನ್ನಯ್ಯ ರವರ ಆದೇಶವನ್ನು ಒಪ್ಪಲು ಬರುವುದಿಲ್ಲ. ಕಾರಣ ನಾವು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಈ ವಿಷಯವನ್ನು 7 ಅಥವಾ ಅದಕ್ಕೂ ಮೇಲ್ಪಟ್ಟ ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠವನ್ನು ರಚಿಸಿ ಪುನರ್ ಪರಿಶೀಲನೆ ಮಾಡಿ ಆದೇಶಿಸಬಹುದೆಂದು ವಿನಂತಿಸಿಕೊಂಡಿದ್ದು ಇರುತ್ತದೆ ಎಂದು ವಿವರಿಸಿದರು.
ರಾಷ್ಟ್ರೀಯ ಹಿಂದುಳಿದ ವರ್ಗಗಗಳ ಆಯೋಗ ಕಾಯ್ದೆ 1993 ಪರಿಚ್ಛೇದ 2 ರಲ್ಲಿ ಹಿಂದುಳಿದ ವರ್ಗಗಳು ಎಂದರೆ ಕೇವಲ ಇತರೆ ಹಿಂದುಳಿದ ಜಾತಿಗಳು ಸ್ಪಷ್ಟವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹೊರತು ಪಡಿಸಿ.ದಿ. 5-10-2006 ರಂದು ಪಂಜಾಬ್ ರಾಜ್ಯ ಸರಕಾರವು ಒಳಮೀಸಲಾತಿಯ ಕಾಯ್ದೆಯನ್ನು ಮಾಡುವ ಸಂದರ್ಭದಲ್ಲಿ ಭಾರತ ಸಂವಿಧಾನ ಅನುಚ್ಛೇದ 338(9) ರ ಪ್ರಕಾರ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಸಲಹೆ ಪಡೆದಿರುವುದಿಲ್ಲ. ಹೀಗೆ ಹಲವು ಸಂವಿಧಾನಬದ್ಧ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದ ಕಾರಣ ನಾವು ರಿಟ್ ಅರ್ಜಿ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.
ನಮಗೆ ಆರ್ಥಿಕ ತೊಂದರೆ ಇದ್ದ ಕಾರಣ, ಡಾ. ಅಂಬೇಡ್ಕರ್ ರವರ ಉದ್ದೇಶವನ್ನು ಉಳಿಸಲು ನಾವು ನ್ಯಾಯಮೂರ್ತಿ ಅರುಣ್ ಮಿಶ್ರಾ ರವರ ನೇತೃತ್ವದ ಸಂವಿಧಾನ ಪೀಠದ ಆದೇಶವನ್ನು ರದ್ದು ಮಾಡಲು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮುಖಾಂತರ ಸರ್ವೋಚ್ಛ ನ್ಯಾಯಾಲಯದಲ್ಲಿ ಭಾರತ ಸಂವಿಧಾನದ ಅನುಚ್ಛೇದ 14 ಮತ್ತು 32 ರಲ್ಲಿ ರಿಟ್ ಅರ್ಜಿ ಸಲ್ಲಿಸಲಾಗುವುದೆಂದು ಹೇಳಿದರು.
[ays_poll id=3]