ಸಿರವಾರ : ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಎರಡನೇ ವರ್ಷದ ಪುಣ್ಯ ಸ್ಮರಣೆಗೆ, ರಾಯಚೂರು ಜಿಲ್ಲೆಯ ರೈತನೋರ್ವ ವಿಶಿಷ್ಟ ರೀತಿಯ ಅಭಿಮಾನವನ್ನು ತೋರಿದ್ದಾನೆ. ರೈತನ ಈ ಸಾಧನೆಯನ್ನು ಕಂಡು ಸ್ವತಃ ಅಶ್ವಿನಿ ಪುನೀತ್ ರಾಜಕುಮಾರ್ ಅವರೇ ಅಚ್ಚರಿಪಟ್ಟಿದ್ದಾರೆ. ಈ ಒಂದು ಸುದ್ದಿ ನೋಡಿದರೆ ನೀವು ಕೂಡ ಅಚ್ಚರಿ ಪಡುತ್ತೀರಿ, ನಿಜವಾದ ಅಭಿಮಾನ ಎಂದರೆ ಇದು ಅಂತೀರಾ. ಏನಪ್ಪ ಅಂತೀರಾ ಈ ಸ್ಟೋರಿ ನೋಡಿ.
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಶ್ರೀನಿವಾಸ ಕ್ಯಾಂಪ್ನ ರೈತ, ಅಪ್ಪು ಅಭಿಮಾನಿ ಸತ್ಯನಾರಾಯಣ ತನ್ನ ಎರಡು ಎಕರೆ ಗದ್ದೆಯಲ್ಲಿ ಜಪಾನ್ ತಂತ್ರಜ್ಞಾನ ಮೂಲಕ ವಿವಿಧ ಭತ್ತದ ತಳಿಗಳನ್ನು ಬೆಳೆದು ಅಪ್ಪು ಚಿತ್ರ ಬಿಡಿಸಿದ್ದಾರೆ. ಈ ಮೂಲಕ ಭತ್ತದ ಬೆಳೆಯಲ್ಲಿ ಪುನೀತ್ ರಾಜಕುಮಾರ್ನ ಜೀವಂತವಿರಿಸಿದ್ದಾರೆ. ತೆಲಂಗಾಣ, ಗುಜರಾತ್ನಿಂದ ತಂದ ಕಾವೇರಿ, ಗೋಲ್ಡನ್ ರೋಸ್, ಕಾಲ ಭಟ್ಟಿ ಹೆಸರಿನ 100 ಕೆ.ಜಿ ಭತ್ತದ ಬೀಜಗಳನ್ನು ನೆಟ್ಟು ಸಾವಯವ ಪದ್ಧತಿಯಲ್ಲಿ ಬೆಳೆದು ಅಪ್ಪು ಮೇಲಿನ ಅಭಿಮಾನ ಮೆರೆದಿದ್ದಾರೆ.
ಬರದ ನಡುವೆಯೇ ಟ್ಯಾಂಕರ್ ಮೂಲಕ ಗದ್ದೆಗೆ ನೀರು ಹಾಯಿಸಿ ಸುಮಾರು 3 ಲಕ್ಷ ರೂ. ಖರ್ಚು ಮಾಡಿ, ನಿತ್ಯ ನಿಗಾವಹಿಸಿ 90 ದಿನದ ಬೆಳೆಯಲ್ಲಿ ಅದ್ಭುತ ಕಲಾಚಿತ್ರ ಮೂಡಿಸಿದ್ದಾರೆ. ಭಾವಚಿತ್ರದ ಕೆಳಗೆ ಕರ್ನಾಟಕ ರತ್ನ ಅನ್ನೋ ಅಕ್ಷರಗಳನ್ನೂ ಬೆಳೆಯಲ್ಲೇ ಬರೆದಿದ್ದಾರೆ. ಒಂದೊಂದು ಅಕ್ಷರ 40 ಅಡಿ ಇದೆ. ತನ್ನ ಅಂಗವೈಕಲ್ಯ ಮೆಟ್ಟಿ ನಿಂತು ಉತ್ತಮ ಬೆಳೆ ಬೆಳೆಯುವ ಮೂಲಕ ಅಪ್ಪು ದ್ವಿತೀಯ ಪುಣ್ಯಸ್ಮರಣೆಗೆ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.
[ays_poll id=3]