ರಾಯಚೂರು : ಕಳ್ಳಭಟ್ಟಿ ಸಾರಾಯಿ ಕುಡಿದು ಗಣೇಶ ಪ್ರತಿಷ್ಠಾಪನೆ ಮಾಡಿದ್ದ ಸ್ಥಳದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮ ನೋಡಲೆಂದು ತೆರಳಿದಾಗ ಶುರುವಾದ ಗಲಾಟೆ ಒಬ್ಬ ವ್ಯಕ್ತಿಯ ಜೀವವನ್ನೇ ಬಲಿ ತೆಗೆದುಕೊಂಡಿದೆ. ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದದ್ದಾರೂ ಹೇಗೆ ಈ ಸ್ಟೋರಿ ನೋಡಿ..
ಹೌದು ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆ ವ್ಯಕ್ತಿಯೋರ್ವನ ಕೊಲೆಯಲ್ಲಿ ಅಂತ್ಯವಾಗಿದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಭೂಪುರ ತಾಂಡಾದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು, ಗಲಾಟೆಯಲ್ಲಿ 26 ವರ್ಷದ ಶಿವನಗೌಡ ನಾಯಕ ಎಂಬಾತ ಸಾವನ್ನಪ್ಪಿದ್ದಾನೆ. ಶಿವನಗೌಡ ನಾಯಕ ಹಾಗೂ ಹನುಮಂತ ಇಬ್ಬರೂ ಸ್ನೇಹಿತರು ರಾಂಪೂರ ಭೂಪುರ ನಿವಾಸಿಗಳು. ವೃತ್ತಿಯಲ್ಲಿ ಮನೆಕಟ್ಟುವ ಗೌಂಡಿಗಳಾಗಿದ್ದು, ದುಡಿದು ಬಂದ ಹಣವನ್ನ ಸಂಸಾರಕ್ಕೆ ಖರ್ಚು ಮಾಡುವುದಕ್ಕಿಂತ ಹೆಚ್ಚಾಗಿ ಕುಡಿತಕ್ಕೆ ಹಾಳು ಮಾಡ್ತಿದ್ರು. ಕಡಿಮೆ ಹಣದಲ್ಲಿ ಕಳ್ಳಭಟ್ಟಿ ಸಾರಾಯಿ ಸಿಗುತ್ತೆ ಅಂತ ಎಂದಿನಂತೆ ಸ್ನೇಹಿತ ಹನುಮಂತನನ್ನ ಕರೆದುಕೊಂಡು ಭೂಪುರ ತಾಂಡಾಕ್ಕೆ ಹೋಗಿದ್ದ.
ಈ ವೇಳೆ ಕಂಠ ಪೂರ್ತಿ ಕುಡಿದು ತಾಂಡಾದಲ್ಲಿ ಇರಿಸಿದ್ದ ಗಣೇಶನ ಟೆಂಟ್ ಬಳಿ ನಡೀತಿದ್ದ ಕಾರ್ಯಕ್ರಮ ನೋಡೋದಕ್ಕೆ ಅಂತ ತೆರಳಿದ್ರು. ಆ ವೇಳೆ ಕಳ್ಳಭಟ್ಟಿ ಸಾರಾಯಿ ನಶೆಯಲ್ಲಿ ಅಲ್ಲಿದ್ದವರ ಜೊತೆ ಗಲಾಟೆ ಶುರು ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದರ ಪರಿಣಾಮ ಗಾಯಗೊಂಡ ಶಿವನಗೌಡ ನಾಯಕ (26) ಆಸ್ಪತ್ರೆ ಪಾಲಾಗಿದ್ದ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಶಿವನಗೌಡ ನಾಯಕ ಈ ದಿನ ಸಾವನ್ನಪ್ಪಿದ್ದಾನೆ.
ಹೌದು ಸ್ನೇಹಿತ ಹನುಮಂತ ಹಾಗೂ ಶಿವನಗೌಡ ನಾಯಕ ಇಬ್ಬರೂ ತಾಂಡಾದ ನಿವಾಸಿಗಳ ಜೊತೆ ಜಗಳಕ್ಕಿಳಿದಿದ್ರು. ಮಾತಿಗೆ ಮಾತು ಬೆಳೆದು ಶುರುವಾದ ಜಗಳ ವಿಕೋಕಪಕ್ಕೆ ಹೋಗಿ ಸ್ಥಳೀಯರಾದ ಅನೀಲ್, ಶಂಕ್ರಪ್ಪ, ಲಕ್ಕಪ್ಪ ವೆಂಕಟೇಶ್ ಹಾಗೂ ಇನ್ನಿತರರು ಕಲ್ಲು ಕಟ್ಟಿಗೆಗಳಿಂದ ಹಲ್ಲೆ ಮಾಡೋದಕ್ಕೆ ಶುರು ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ವೇಳೆ ಹನುಂಮತ ಹೇಗೋ ತಪ್ಪಿಸಿಕೊಂಡು ಹೋಗಿ ಶಿವುನ ಸಹೋದರರನ್ನ ಸ್ಥಳಕ್ಕೆ ಕರೆದುಕೊಂಡು ಬಂದಿದಾನೆ. ಆದ್ರೆ ಅಷ್ಟರಲ್ಲಿ ಶಿವನಗೌಡನ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ನಡೆಸಲಾಗಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡ ಆತನನ್ನು ಲಿಂಗಸೂಗೂರು ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ಅಂತ ಕರೆತರಲಾಯಿತಾದ್ರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಶಿವಮಗೌಡ ಸಾವನ್ನಪ್ಪಿದ್ದು, ಶಿವುಗೆ ಮೂವರು ಚಿಕ್ಕ ಮಕ್ಕಳಿದ್ದಾರೆ. ಪತ್ನಿ ಇನ್ನೂ 6 ತಿಂಗಳ ಬಾಣಂತಿ, ತವರು ಮನೆಯಲ್ಲಿರುವಾಗಲೇ ಪತಿಯ ಸಾವಿನ ಸುದ್ದಿ ಬಂದಿದ್ದು, ಪತ್ನಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಸದ್ಯ ಕ್ಷುಲ್ಲಕ ಕಾರಣಕ್ಕೆ ಓರ್ವ ವ್ಯಕ್ತಿಯ ಜೀವ ಬಲಿ ಪಡೆದ ಅನೀಲ್, ಲಕ್ಕಪ್ಪ, ಶಂಕ್ರಪ್ಪ, ಹಾಗೂ ವೆಂಕಟೇಶ್ ಮೇಲೆ ಸೆಕ್ಷನ್ 307 ಅಡಿಯಲ್ಲಿ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೆಂಕಟೇಶ್ ನನ್ನ ಬಂಧಿಸಲಾಗಿದ್ದು, ಇನ್ನಿತರ ಮೂರು ಜನರ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.