
ರಾಯಚೂರು: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನವಾಗಿದ್ದು, ಅಲ್ಲದೆ ಅಮಾವಾಸ್ಯೆ ಇರುವ ಹಿನ್ನೆಲೆಯಲ್ಲಿ, ಚುನಾವಣೆಗೆ ಸ್ಪರ್ಧಿಸುವವರು ಬಹುತೇಕ ನಾಮಪತ್ರ 19ರಂದೆ ಸಲ್ಲಿಸಿದರು. ಎಲ್ಲ ಕಡೆಗಳಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಭರ್ಜರಿ ಮೆರವಣಿಗೆಗಳನ್ನು ಆಯೋಜಿಸಿ ರೋಡ್ ಶೋ ಮಾಡಿದರು.
ರಾಯಚೂರು ಗ್ರಾಮೀಣ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್ ಅವರು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ ಏಪ್ರಿಲ್ 19 ರಂದು ನಡೆಸಿದ ಮೆರವಣಿಗೆಗೆ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರು. ಬಸವೇಶ್ವರ ವೃತ್ತದಿಂದ ಮೆರವಣಿಗೆ ಆರಂಭಿಸಿ ತಹಶೀಲ್ದಾರ್ ಕಚೇರಿಗೆ ತಲುಪಿದರು. ಸಿಂಧನೂರು ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ, ಕೆಪಿಸಿಸಿ ಕಾರ್ಯದರ್ಶಿ ವಸಂತ ಕುಮಾರ, ಕೆ.ಶಾಂತಪ್ಪ, ಶರಣಪ್ಪ ಕಲ್ಮಲಾ, ಬಸನಗೌಡ ಮತ್ತಿತರರು ಇದ್ದರು.
ಇನ್ನೊಂದು ಕಡೆ ರಾಯಚೂರು ಗ್ರಾಮೀಣ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಾಲ್ದಾರ್ ಕೂಡಾ ಭಾರಿ ಮೆರವಣಿಗೆ ಸಹಿತ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಭಾಗವಹಿಸಿದ್ದರು. ರಾಮಮಂದಿರದಿಂದ ಮೆರವಣಿಗೆಯು ಆರಂಭವಾಗಿ ತಹಶೀಲ್ದಾರ್ ಕಚೇರಿಗೆ ತಲುಪಿತು. ಪ್ರಚಾರದಲ್ಲಿ ಜನರೇ ಹಣವನ್ನು ದೇಣಿಗೆ ರೂಪದಲ್ಲಿ ನೀಡುತ್ತಿರುವುದನ್ನು ನೋಡಿದ್ದೇನೆ. ಪಕ್ಷವನ್ನು ಗೆಲ್ಲಿಸಲು ಅಭೂತಪೂರ್ವ ಕೆಲಸ ಮಾಡುತ್ತಾರೆ ಎಂದು ಅಣ್ಣಮಲೈ ಹೇಳಿದರು. ಜೆಡಿಎಸ್ ಅಭ್ಯರ್ಥಿ ಸಣ್ಣ ನರಸಿಂಹ ನಾಯಕ ಅವರು ಸಹ ಮತ್ತೊಮ್ಮೆ ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು. ಕೆಆರ್ಪಿಪಿ ಅಭ್ಯರ್ಥಿಯಾಗಿ ಖಾಸಿಂ ನಾಯಕ ಅವರು ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಪತ್ನಿ ಹಾಗೂ ಪಕ್ಷದ ಪ್ರಮುಖರು ಇದ್ದರು.
ರಾಯಚೂರು ನಗರ ವಿಧಾನಸಭೆ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಈ.ವಿನಯಕುಮಾರ, ಅಮ್ ಆದ್ಮಿ ಪಕ್ಷದಿಂದ ವೀರೇಶ ಕುಮಾರ ಯಾದವ್ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು, ಬಷಿರುದ್ದೀನ್, ಮಹಾದೇವ, ಮಹಮ್ಮದ್ ಶಾಲಂ, ರಾಮನಗೌಡ ಏಗನೂರು ಅವರು ನಾಮಪತ್ರ ಸಲ್ಲಿಸಿದರು.
![]() |
![]() |
![]() |
![]() |
![]() |
[ays_poll id=3]