K2kannadanews.in
Local News ರಾಯಚೂರು : ಅಕ್ರಮ ಮುರಳುಗಾರಿಕೆ ತಡೆದು ಟ್ರ್ಯಾಕ್ಟರ್ ವಶಪಡಿಸಿಕೊಂಡಿದ್ದ ಪೇದೆ ಮೇಲೆ ಹಲ್ಲೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಶಾಸಕಿ ಪುತ್ರ ಸಂತೋಷ್ಗೆ ಜಿಲ್ಲಾ ಸತ್ರ ನ್ಯಾಯಾಲಯ ಅರೆಸ್ಟ್ ವಾರೆಂಟ್ ಆದೇಶ ಹೊರಡಿಸಿದೆ ಎನ್ನಲಾಗುತ್ತಿದೆ.
ಕಳೆದ ವರ್ಷ ಕೃಷ್ಣ ನದಿಯಿಂದ ಮರಳು ಅಕ್ರಮ ಸಾಗಣೆ ಮಾಡುವ ವೇಳೆ ಕರ್ತವ್ಯದಲ್ಲಿದ್ದ ಕಾನ್ ಸ್ಟೆಬಲ್ ಹನುಮಂತ ಎನ್ನುವವರು ಟ್ರ್ಯಾಕ್ಟರ್ ನಿಲ್ಲಿಸಿದ್ದರು. ಈ ಸಂಬಂಧ ಮಾತುಕತೆಗೆಂದು ಪ್ರವಾಸಿ ಮಂದಿರಕ್ಕೆ ಕರೆಸಿದ ಶಾಸಕಿ ಕರೆಮ್ಮ ಪುತ್ರ ಸಂತೋಷ, ಶಾಸಕರ ಆಪ್ತ ಸಹಾಯಕ ರಫಿ, ಇಲಿಯಾಸ್ ಹಲ್ಲೆ ನಡೆಸಿದ್ದರು. ಅಲ್ಲದೇ ಜಾತಿ ನಿಂದನೆ ಮಾಡಿದ್ದರು. ಇದೇ ವಿಚಾರಕ್ಕೆ ಪೇದೆ ಹನುಮಂತ ಹಲ್ಲೆ ಮತ್ತು ಜಾತಿ ನಿಂದನೆ ದೂರು ದಾಖಲಿಸಿದ್ದರು.
ನಂತರ ಪ್ರಕರಣದಲ್ಲಿ ಬಹುತೇಕ ಆರೋಪಿಗಳು ಜಾಮೀನು ಪಡೆದುಕೊಂಡಿದ್ದರು. ಆದರೆ ಗೋಪಾಲಕೃಷ್ಣ ನಾಯಕ ವಿಚಾರಣೆಗೆ ಹಾಜರಾಗದ ಹಿನ್ನೆಲೆ ಅವರ ವಿರುದ್ಧ ನ್ಯಾಯಾಲಯ ಬಂಧನ ವಾರೆಂಟ್ ಜಾರಿಗೊಳಿಸಿದ್ದು, ಜುಲೈ 5ರಂದು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸೂಚಿಸಿದೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸಂತೋಷ ವಿರುದ್ಧ ಸೆಕ್ಷನ್ 143, 147, 323, 332, 353, 342, 504, 1490 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಮಾತನಾಡಿದ ಲಿಂಗಸುಗೂರು ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ್ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆಯುತ್ತಿದೆ. ಸಂತೋಷ ಬಂಧನ ವಾರಂಟ್ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.