This is the title of the web page
This is the title of the web page
Politics News

ಕಾಂಗ್ರೆಸ್ 2ನೇ ಪಟ್ಟಿಯಲ್ಲೂ ರಾಯಚೂರು 5 ಕ್ಷೇತ್ರಗಳು ಪೆಂಡಿಂಗ್


ರಾಯಚೂರು : ರಾಜ್ಯದಲ್ಲಿ ಚುನಾವಣೆ ರಣಕಣ ರಂಗೇರಿದೆ. ಆದರೆ ಎರಡು ಪಕ್ಷಗಳು ಅಭ್ಯರ್ಥಿಗಳ ಘೋಷಣೆಯಲ್ಲಿ ಸಾಕಷ್ಟು ಎಚ್ಚರಿಕೆಯ ಹೆಜ್ಜೆಗಳನ್ನು ಹಾಕುತ್ತಿವೆ. ನಿನ್ನೆ ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, 42 ಕ್ಷೇತ್ರಗಳ ಅಭ್ಯರ್ಥಿಗಳ ಟಿಕೆಟ್ ಘೋಷಿಸಿದೆ. ಈ ಪಟ್ಟಿಯಲ್ಲಿ ರಾಯಚೂರು ಜಿಲ್ಲೆಯ 5 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಆಗಿಲ್ಲ. ಹೀಗಾಗಿ ಟಿಕೆಟ್ ಹಂಚಿಕೆ ಗೊಂದಲ ಮುಂದುವರೆದಿದೆ ಎನ್ನುವ ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿದೆ.

ಮೊದಲ ಪಟ್ಟಿಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಹಾಲಿ ಶಾಸಕರಾದ ಬಸವನಗೌಡ ದದ್ದಲ್ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಹಾಲಿ ಶಾಸಕರಾದ ಶಾಸಕ ಬಸವನಗೌಡ ತುರುವಿಹಾಳಗೆ ಟಿಕೆಟ್ ದೊರೆತಿದೆ. ಆದರೆ ರಾಯಚೂರು ನಗರ, ಮಾನವಿ, ಸಿಂಧನೂರು, ದೇವದುರ್ಗ, ಲಿಂಗಸೂಗೂರು ವಿಧಾನಸಭಾ ಕ್ಷೇತ್ರಗಳಿಗೆ ಟಿಕೆಟ್ ಅಂತಿಮವಾಗಿಲ್ಲ. ಹೀಗಾಗಿ ಎರಡನೇ ಪಟ್ಟಿಯಲ್ಲಿ ಐದು ಕ್ಷೇತ್ರಗಳ ಅಭ್ಯರ್ಥಿಗಳಿಗೆ ಟಿಕೆಟ್​ ಫೈನಲ್​ ಆಗುತ್ತೆ ಎನ್ನುವ ಕಾರ್ಯಕರ್ತರ ನಿರೀಕ್ಷೆ ಹುಸಿಯಾಗಿದೆ.

ಎನ್.ಎಸ್.ಬೋಸರಾಜ್ ಪೈಪೋಟಿ: ಕಾಂಗ್ರೆಸ್​ ರಾಯಚೂರು ನಗರ ಕ್ಷೇತ್ರಕ್ಕೆ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುತ್ತಾ ಬಂದಿದೆ. ಆದರೆ ಈ ಸಲ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ್ ಪ್ರಬಲ ಆಕಾಂಕ್ಷಿಯಾಗಿದ್ದು, ಪೈಪೋಟಿ ನಡೆಸಿದ್ದಾರೆ. ಆದರೆ ಇತ್ತ ಮುಸ್ಲಿಂ ಸಮುದಾಯದ ಮುಖಂಡರಿಗೆ ಟಿಕೆಟ್ ನೀಡಬೇಕು ಎನ್ನುವ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಸಂಘಟನೆಗಳು, ಮುಖಂಡರು ಒತ್ತಾಯಿಸಿರುವುದಲ್ಲದೆ ಪ್ರತಿಭಟನೆಗಳನ್ನು ಮಾಡಿ, ಹೈಕಮಾಂಡ್ ಮೇಲೆ ಪ್ರಭಾವ ಹಾಕುತ್ತಿದ್ದಾರೆ. ಎನ್.ಎಸ್.ಬೋಸರಾಜ್ ಹಾಗೂ ಅವರ ಪುತ್ರ ರವಿಬೋಸರಾಜ್ ಟಿಕೆಟ್​ಗಾಗಿ ಭಾರಿ ಸ್ಪರ್ಧೆಗಿಳಿದಿದ್ದು, ಒಂದು ಹಂತದಲ್ಲಿ ಎನ್.ಎಸ್.ಬೋಸರಾಜ್ ಅವರಿಗೆ ಟಿಕೆಟ್ ಫೈನಲ್ ಆಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಮಾನವಿ ವಿಧಾನಸಭಾ ಕ್ಷೇತ್ರ ಟಿಕೆಟ್​ಗೆ ಜಿದ್ದಾಜಿದ್ದಿ: ಮಾನವಿ ವಿಧಾನಸಭಾ ಕ್ಷೇತ್ರಕ್ಕೆ ಎನ್.ಎಸ್.ಬೋಸರಾಜ್ ಬೆಂಬಲಿಗರಾದ ಮಾಜಿ ಶಾಸಕ ಜಿ.ಹಂಪಯ್ಯ ನಾಯಕ, ಶರಣಪ್ಪ ಗುಡಿದಿನ್ನಿ, ಎಂ.ಈರಣ್ಣ ಸೊಸೆ ತನುಶ್ರೀ ಹಾಗೂ ಮಾಜಿ ಸಂಸದ ಹಾಲಿ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಟಿಕೆಟ್ ಗಾಗಿ ಕಸರತ್ತು ನಡೆಸಿದ್ದಾರೆ. ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಬಸವನಗೌಡ ಬಾದರ್ಲಿ ನಡುವೆ ಟಿಕೆಟ್ ಪಡೆಯಲು ಜಿದ್ದಾಜಿದ್ದಿ ನಡೆಯುತ್ತಿದೆ.

ದೇವದುರ್ಗ ಕ್ಷೇತ್ರಕ್ಕೆ ಬಿ.ವಿ.ನಾಯಕ ಹೆಸರು ಚಾಲ್ತಿಯಲ್ಲಿದೆ. ಆದರೂ ದೇವದುರ್ಗದಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದು, ಮಾನವಿ ಕ್ಷೇತ್ರ ಕಡೆ ಒಲವು ತೊರಿಸುತ್ತಿದ್ದಾರೆ. ಆದರೆ ಹೈಕಮಾಂಡ್ ದೇವದುರ್ಗ ದಿಂದ ಸ್ಪರ್ಧಿಸುವಂತೆ ಸೂಚಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಲಿಂಗಸೂಗೂರು ಕ್ಷೇತ್ರದಿಂದ ಹಾಲಿ ಶಾಸಕರಾಗಿದ್ದ ಡಿ.ಎಸ್.ಹೂಲಗೇರಿ ಟಿಕೆಟ್ ನೀಡಬೇಕು ಎನ್ನುವ ಒತ್ತಾಯವಿದ್ದು, ಇವರಿಗೆ ಆರ್.ರುದ್ರಯ್ಯ ಪೈಪೋಟಿ ನಡೆಸುತ್ತಿದ್ದಾರೆ.


[ays_poll id=3]