K2kannadanews.in
Local News ಸಿಂಧನೂರು : ಜಿಲ್ಲೆಯ ಸಿಂಧನೂರು ತಾಲೂಕಿನ ಮುಕುಂದ ಗ್ರಾಮದಲ್ಲಿ ಈ ಒಂದು ಅಮಾನವೀಯ ಘಟನೆ ನಡೆದಿದೆ. 21ನೇ ಶತಮಾನದ ಡಿಜಿಟಲ್ ಯುಗದಲ್ಲಿ ನಾವಿದ್ದೇವೆ. ಆದರೆ ಇಂದಿಗೂ ಗ್ರಾಮಾಂತರ ಪ್ರದೇಶದಲ್ಲಿ ಆಗಾಗ ಅಮಾನವೀಯ ಘಟನೆಗಳು ನಡೆಯುತ್ತಿರುತ್ತವೆ.
ಅದಕ್ಕೆ ಕಾರಣ ಸರ್ಕಾರವೊ, ಅಧಿಕಾರಿಗಳೊ, ರಾಜಕಾರಣಿಗಳೊ ಗೊತ್ತಾಗುವುದಿಲ್ಲ. ಗ್ರಾಮದಲ್ಲಿ ಹಿರಿಯರ ಕಾಲದಿಂದಲೂ ಸಾರ್ವಜನಿಕ ಸ್ಮಶಾನ ತುಂಗಭದ್ರಾ ನದಿ ನಡುಗಡ್ಡಿಯಲ್ಲಿದೆ. ಆದರೆ ಈ ಒಂದು ಸ್ಮಶಾನ ಎಷ್ಟರ ಮಟ್ಟಿಗೆ ಅಪಾಯಕಾರಿ ಎಂದರೆ, ಶವಸಂಸ್ಕಾರಕ್ಕೆ ಹೋದವರ ಜೀವ ಪಡೆದರು ಆಚ್ಚರಿ ಎನ್ನುವಂತಿಲ್ಲ. ಮುಕುಂದ ಗ್ರಾಮದಲ್ಲಿ ಹಿರಿಯ ವೃದ್ಧೆ ಓರ್ವರು ಮೃತಪಟ್ಟ ಹಿನ್ನೆಲೆಯಲ್ಲಿ ಅವರನ್ನು ಶವಸಂಸ್ಕಾರ ಮಾಡಲು, ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಜೀವ ಪಣಕ್ಕಿಟ್ಟು ಶವಹೊತ್ತು ಕುಟುಂಬ ಸದಸ್ಯರು ನದಿಯಲ್ಲಿ ಸಾಗಿದರೇ. ಸಂಸ್ಕಾರಕ್ಕೆ ಬಂದವರು ತೆಪ್ಪದಲ್ಲಿ ತೆರಳಿ ಶವಸಂಸ್ಕಾರ ಮಾಡಿದ್ದಾರೆ. ಈ ಬಗ್ಗೆ ಗ್ರಾಮಸ್ಥರಾದ ಗಂಗಾಧರ್ ಅಸಮಾಧಾನ ವ್ಯಕ್ತಪಡಿಸೋದು ಹೀಗೆ.
ಇನ್ನು ಈ ಒಂದು ಘಟನೆ ನಡೆದರೂ ಜಿಲ್ಲಾಡಳಿತವಾಗಲಿ, ತಾಲೂಕು ಆಡಳಿತವಾಗಲಿ ಸಹಾಯಕ್ಕೆ ಬಂದಿಲ್ಲ ಅಂತ ಅಲ್ಲ, ಸುಮಾರು 15 ವರ್ಷಗಳ ಹಿಂದೆ ಗ್ರಾಮಕ್ಕೆ ಒಂದು ಎಕರೆಯಷ್ಟು ಸಾರ್ವಜನಿಕ ಸ್ಮಶಾನಕ್ಕಾಗಿ ಜಾಗ ನೀಡಿದೆ. ಆದರೆ ಅದು ಕೇವಲ ದಾಖಲೆಗಳಲ್ಲಿ ಎಂಬಂತೆ ಆಗಿದೆ. ಗ್ರಾಮಸ್ಥರು ಹೇಳುವ ಪ್ರಕಾರ ಈ ಒಂದು ಮಂಜೂರಾದ ಜಾಗವನ್ನ ಒತ್ತುವರಿ ಮಾಡಿಕೊಂಡು ಉಳುಮೆ ಮಾಡುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು, ಮುಖಂಡರು ಪಂಚಾಯಿತಿ ಅಧಿಕಾರಿಗಳಿಂದ ಹಿಡಿದು ಸಚಿವರವರ ವರೆಗೆ ಸ್ಮಶಾನ ಜಾಗಕ್ಕೆ ಸೌಕರ್ಯ ಒದಗಿಸಿ ಶವಸಂಸ್ಕಾರ ಮಾಡಲು ಅನುವು ಮಾಡಿಕೊಡುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ. ಯಾರೊಬ್ಬರೂ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದೆ.
ಒಟ್ಟಾರಿಯಾಗಿ ಅಧಿಕಾರಿಗಳ ನಿರ್ಲಕ್ಷವೋ ಅಥವಾ ಪ್ರಭಾವಿಗಳ ಪ್ರಭಾವವೊ, ಗ್ರಾಮಕ್ಕೆ ನೀಡಿದ ಸಾರ್ವಜನಿಕ ಸ್ಮಶಾನ ಉಪಯೋಗಕ್ಕೆ ಬಾರದೆ ಜೀವಪಣಕ್ಕೆ ಇಟ್ಟು ನಡುಗಡ್ಡೇಯಲ್ಲಿ ಶವ ಸಂಸ್ಕಾರಕ್ಕೆ ಮುಂದಾಗಿದ್ದಾರೆ ಗ್ರಾಮಸ್ಥರು. ಇನ್ನಾದರೂ ಸಂಬಂಧಪಟ್ಟ ಇಲಾಖೆ ಅಥವಾ ಅಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ಕೈಗೊಳ್ಳುತ್ತಾ ನೋಡಬೇಕಿದೆ.