K2kannadanews.in
Local News ರಾಯಚೂರು : ಮುಂಗಾರು ಪೂರ್ವ ಜೋರು ಮಳೆಗೆ ರಾಯಚೂರಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಗೋಡೆಗಳೆಲ್ಲಾ ಒದ್ದೆಯಾಗಿದ್ದು ಮೇಲ್ಚಾವಣಿ ಸೋರುತ್ತಿದೆ. ಕಾಲೇಜಿನಲ್ಲಿ 6 ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದು ಅಲ್ಲಲ್ಲಿ ಮೇಲ್ಚಾವಣಿ ಸಿಮೆಂಟ್ ಪದರು ಕುಸಿದು ಬಿದ್ದಿದೆ. ಇನ್ನೂ ಮಳೆಗಾಲದಲ್ಲಿ ಯಾವ ಪರಸ್ಥಿತಿ ಎದುರಾಗುತ್ತೋ ಗೊತ್ತಿಲ್ಲ.
ರಾಯಚೂರು ನಗರದಲ್ಲಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಹಳೆಯ ಕಟ್ಟಡ ಮುಂಗಾರು ಪೂರ್ವ ಮಳೆಗೆ ತೊಟ್ಟಿಕ್ಕುತ್ತಿದ್ದು, ಇನ್ನಷ್ಟು ಶಿಥಿಲಾವಸ್ಥೆಗೆ ತಲುಪುತ್ತಿದೆ. ಸುಮಾರು 30 ವರ್ಷದ ಕಟ್ಟಡದ ಒಟ್ಟು ಒಂಭತ್ತು ಕೊಠಡಿಗಳಲ್ಲಿ ನಾಲ್ಕೈದು ಕೊಠಡಿಗಳು ಮಳೆ ಬಂದಾಗಲೆಲ್ಲಾ ಸೋರುತ್ತಿವೆ. ಈಗಾಗಲೇ ಅಲ್ಲಲ್ಲಿ ಮೇಲ್ಚಾವಣಿ ಕುಸಿದು ಬಿದ್ದಿದೆ.ತರಗತಿ ಕೋಣೆಗಳು, ಉಪನ್ಯಾಸಕರ ಕೊಠಡಿಯಲ್ಲಿ ಎಲ್ಲೆಂದರಲ್ಲಿ ಮೇಲ್ಚಾವಣಿ ಪದರು ಕುಸಿದಿದ್ದು ಜೀವ ಭಯ ಹುಟ್ಟಿಸುವಂತ ಪರಸ್ಥಿತಿ ನಿರ್ಮಾಣವಾಗಿದೆ. ಪ್ರತೀ ವರ್ಷ ಕಲಾ,ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ಸುಮಾರು 400 ವಿದ್ಯಾರ್ಥಿಗಳು ಓದುತ್ತಿದ್ದು, ಕಟ್ಟಡ ಮಾತ್ರ ಮಳೆ ಬಂದಾಗಲೆಲ್ಲಾ ಭಯ ಹುಟ್ಟಿಸುತ್ತಿದೆ. ಪ್ರಥಮ ಪಿಯುಸಿ ತರಗತಿಗೆ ಮಕ್ಕಳ ಸಂಖ್ಯೆ ಹೆಚ್ಚಿಸಲು ಉಪನ್ಯಾಸಕರು ಅಭಿಯಾನ ಮೂಲಕ ಪರದಾಟ ನಡೆಸಿದ್ದಾರೆ. ಆದ್ರೆ ಶಿಥಿಲಗೊಂಡ ಕಟ್ಟಡ ನೋಡಿ ಮಕ್ಕಳನ್ನ ಬಿಡಲು ಪೋಷಕರು ಹಿಂದೇಟು ಹಾಕುವಂತ ಪರಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಅಧಿಕಾರಿಗಳು ಮಾತ್ರ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೇವೆ ಅಂತಿದ್ದಾರೆ.
ಜೋರು ಮಳೆ ಬಂದಾಗಲೆಲ್ಲಾ ಕಾಲೇಜಿನ ಸುಮಾರು ಕೊಠಡಿಗಳು ತೊಟ್ಟಿಕ್ಕುತ್ತವೆ. ಕಟ್ಟಡಗಳ ದುರಸ್ತಿ ಹಾಗೂ ಹೊಸ ಕೊಠಡಿಗಳ ನಿರ್ಮಾಣವಾದ್ರೆ ಮಾತ್ರ ವಿದ್ಯಾರ್ಥಿಗಳು, ಉಪನ್ಯಾಸಕರು ನೆಮ್ಮದಿಯಿಂದ ಕಾಲೇಜಿಗೆ ಬರಬಹುದು. ಕನಿಷ್ಠ ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತು ಇಲ್ಲಿನ ಸಮಸ್ಯೆ ಬಗೆಹರಿಸಬೇಕಿದೆ.