K2kannadanews.in
Local News ಸಿಂಧನೂರು : ಅಂಬಾ ಮಾತಾಕಿ ಜೈ, ತಾಯಿ ತುಂಗಭದ್ರಗೆ ಜಯವಾಗಲಿ, ಹರಹರ ಮಹಾದೇವ, ತುಂಗಾರತಿಗೆ ಜಯವಾಗಲಿ, ಅಂಬಾ ಮಾತೆಗೆ ಜಯವಾಗಲಿ ಎನ್ನುವ ಭಕ್ತಿ ಭಾವದ ಘೋಷಣೆಗಳ ಮಧ್ಯೆ ತುಂಗಭದ್ರಗೆ ಅಂಬಾ ಆರತಿ ಕಾರ್ಯಕ್ರಮವು ಸೆ.22ರಂದು ತುಂಗಭದ್ರಾ ತಟದಲ್ಲಿರುವ ಮುಕ್ಕುಂದಾ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು.
ಗೋಧೂಳಿ ಹೊತ್ತಿಗೆ, ಜಿಟಿಜಿಟಿ ಮಳೆಹನಿಗಳ ಸಿಂಚನದಲ್ಲಿ ವಾರಣಾಸಿಯ ಪ್ರಖ್ಯಾತ ಅರ್ಚಕರ ತಂಡವು ಮುಕ್ಕುಂದಾ ನದಿ ತೀರದಲ್ಲಿ ಅಂಬಾ ಆರತಿಯ ಪೂಜಾ ಕೈಂಕರ್ಯಗಳನ್ನು ಆರಂಭಿಸುತ್ತಿದ್ದಂತೆ ನೆರೆದಿದ್ದ ಜನಸ್ತೋಮದಿಂದ ಜಯಕಾರದ ಘೋಷಣೆಗಳು ಮೊಳಗಿದವು. ಮುಕ್ಕುಂದಾ ಸೇರಿದಂತೆ ಸುತ್ತಲಿನ ಹಳ್ಳಿಗಳ ಗ್ರಾಮಸ್ಥರು ತುಂಗಭದ್ರೆಯ ಅಂಗಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ಆಂಬಾ ಆರತಿಯ ಸಂಭ್ರಮವನ್ನು ಕಣ್ತುಂಬಿಕೊಂಡರು. ನೆರೆದಿದ್ದ ಜನರು ತುಂಗಭದ್ರೆಗೆ ಹಾಗೂ ತಾಯಿ ಅಂಬಾದೇವಿಗೆ ಭಕ್ತಿ-ಭಾವದಿಂದ ನಮನ ಸಲ್ಲಿಸಿದರು.
ಸಿಂಧನೂರ ತಾಲೂಕಾಡಳಿತ ಮತ್ತು ಸಿಂಧನೂರ ತಾಲೂಕು ದಸರಾ ಉತ್ಸವ ಸಮಿತಿ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ನೇತೃತ್ವವನ್ನು ಸಿಂಧನೂರ ಕ್ಷೇತ್ರದ ಶಾಸಕರು ಹಾಗೂ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾದ ಹಂಪನಗೌಡ ಬಾದರ್ಲಿ ಅವರು ವಹಿಸಿದ್ದರು.